ಪರಮ ಶ್ರೇಷ್ಠವಾದ ಅನುರಾಧ ನಕ್ಷತ್ರದಲ್ಲಿ ಜನಿಸಿದ ಅದೃಷ್ಟವಂತರ ಜಾತಕ!!

ಅನುರಾಧಾ ನಕ್ಷತ್ರವನ್ನು 17ನೇ ನಕ್ಷತ್ರ ಎಂದು ಪರಿಗಣಿಸಲಾಗುವುದು. ಈ ನಕ್ಷತ್ರವು ರಾಧಾ ದೇವಿಗೆ ಸಂಬಂಧಿಸಿದ ನಕ್ಷತ್ರ ಎಂದು ಸಹ ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದ ನಾಲ್ಕು ಪಾದವರು ಸಹ ವೃಶ್ಚಿಕ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ನಕ್ಷತ್ರವನ್ನು ಶನಿಯು ಆಳುವನು. ರಾಶಿಯನ್ನು ಮಂಗಳನು ಆಳುವನು. ಹಾಗಾಗಿ ಈ ನಕ್ಷತ್ರದವರು ಸಾಮಾನ್ಯವಾಗಿ ಉತ್ಸಾಹಿಗಳಾಗಿರುತ್ತಾರೆ. ಇವರ ಸ್ವಭಾವ ಹಾಗೂ ವರ್ತನೆಯು ಹೇಗೆ ಭಿನ್ನವಾಗಿರುತ್ತದೆ? ಎನ್ನುವುದನ್ನು ತಿಳಿಯೋಣ ಬನ್ನಿ.

​* ಶನಿ ಮತ್ತು ಮಂಗಳನ ಪ್ರಭಾವ:
ಈ ನಕ್ಷತ್ರದ ಅಧಿಪತಿ ಶನಿ ಮತ್ತು ರಾಶಿಯ ಅಧಿಪತಿ ಮಂಗಳ. ಹಾಗಾಗಿ ಇವರ ಸ್ವಭಾವದಲ್ಲಿ ಸ್ನೇಹ, ಸೌಮ್ಯತೆ ಮತ್ತು ವಿಶ್ವಾಸ ಇರುತ್ತದೆ. ಅನುರಾಧ ಎನ್ನುವುದುಮೂರು ಅಥವಾ ನಾಲ್ಕು ನಕ್ಷತ್ರಗಳ ಗುಂಪು ಎಂದು ಪರಿಗಣಿಸಲಾಗಿದೆ. ಮಂಗಳನ ಪ್ರಭಾವ ಇರುವುದಕ್ಕೆ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಹಾಗೂ ಚೈತನ್ಯ ಶೀಲ ಸ್ವಭಾವವನ್ನು ಹೊಂದಿರುತ್ತಾರೆ.

​* ಜೀವನದಲ್ಲಿ ಹೆಚ್ಚು ಶ್ರಮ ವಹಿಸಬೇಕಾಗುವುದು:

ಈ ನಕ್ಷತ್ರದ ಅಧಿಪತಿ ಶನಿ ಆಗಿರುವುದರಿಂದ ಇವರು ಮಾನಸಿಕವಾಗಿ ನೇರವಾಗಿ ಮಾತನಾಡುವ ಸ್ವಭಾವ ಹೊಂದಿರುತ್ತಾರೆ. ಅವರು ಏನನ್ನು ಬಯಸುತ್ತಾರೆ? ಏನನ್ನು ಅಂದುಕೊಳ್ಳುತ್ತಾರೆ ಅಥವಾ ಯಾರಾದರೂ ಅವರ ಮನಸ್ಸಿಗೆ ಉಂಟುಮಾಡಿದ ಸಂಗತಿಗಳನ್ನು ನೇರವಾಗಿ ಹೇಳುತ್ತಾರೆ. ಸಂಬಂಧದ ವಿಷಯ ಬಂದಾಗಲೂ ಅವರು ಕಂಡ ದೋಷಗಳನ್ನು ನೇರವಾಗಿ ಹೇಳುತ್ತಾರೆ. ಇವರ ನೇರವಾದ ಮತ್ತು ಬಹಿರಂಗವಾಗಿ ಮಾತನಾಡುವುದರಿಂದ ಇವರಿಗೆ ಸ್ನೇಹಿತರ ಸಂಖ್ಯೆ ಕಡಿಮೆ ಎನ್ನಬಹುದು. ಇವರು ಸಾಕಷ್ಟು ಧಾರ್ಮಿಕ ನಂಬಿಕೆ ಹಾಗೂ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಯಾವುದೇ ಅಡೆತಡೆ ಉಂಟಾದರೂ ಬೇಸರಕ್ಕೆ ಒಳಗಾಗುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ದುಡಿದು ಹಣ ಸಂಪಾದಿಸಲು ಪ್ರಯತ್ನಿಸುತ್ತಾರೆ.

​* ಉತ್ತಮವಾಗಿ ಕೆಲಸ ನಿರ್ವಹಿಸುತ್ತಾರೆ:

ಇವರು ಯಾವುದೇ ಕೆಲಸವನ್ನು ನಿರ್ವಹಿಸುವಾಗ ಅದನ್ನು ಮನಃಪೂರ್ವಕವಾಗಿ ನಿರ್ವಹಿಸುತ್ತಾರೆ. ಯಾರಿಗಾದರೂ ಸಹಾಯ ಮಾಡಲು ಬಯಸಿದರೆ ಅದನ್ನು ಅವರು ಮನಸಾರೆ ಮಾಡುತ್ತಾರೆ. ಗೌರವ, ಸಂಪತ್ತು ಮತ್ತು ಮಾನ್ಯತೆಯನ್ನು ಪಡೆದುಕೊಳ್ಳಲು ಶ್ರಮದಿಂದ ಕೆಲಸವನ್ನು ನಿರ್ವಹಿಸಬೇಕು ಎನ್ನುವುದನ್ನು ನಂಬುತ್ತಾರೆ. ಸತ್ಯವನ್ನೇ ಹೇಳುವ ಇವರು ಸತ್ಯವನ್ನೇ ಕೇಳಲು ಬಯಸುತ್ತಾರೆ. ಇವರು ಕೆಲಸಕ್ಕಿಂತ ವ್ಯಾಪಾರ ವಹಿವಾಟಿನಲ್ಲಿ ಉತ್ತಮರಾಗಿರುತ್ತಾರೆ. ಹಾಗೆಯೇ ವ್ಯಾಪಾರ ಮತ್ತು ವ್ಯವಹಾರದಲ್ಲಿಯೇ ಹೆಚ್ಚು ಲಾಭ ಮತ್ತು ಯಶಸ್ಸನ್ನು ಪಡೆದುಕೊಳ್ಳುವರು.

​* ಸಂಪತ್ತಿನ ವಿಷಯದಲ್ಲಿ ಅದೃಷ್ಟ:

ಇವರು ತಾವು ಮಾಡುವ ಕೆಲಸದಲ್ಲಿ ಗಂಭೀರತೆ ಮತ್ತು ಶ್ರಮವನ್ನು ವಿನಿಯೋಗಿಸುವುದರ ಮೂಲಕ ಯಶಸ್ಸನ್ನು ಸಾಧಿಸುತ್ತಾರೆ. ವೃತ್ತಿ ಜೀವನದಲ್ಲಿ ಅವಕಾಶಗಳನ್ನು ಬಳಸಿಕೊಂಡು ಸರಿಯಾದ ಶ್ರಮ ಹಾಗೂ ಬದ್ಧತೆಯನ್ನು ವಿನಿಯೋಗಿಸಿಕೊಳ್ಳುವುದರ ಮೂಲಕ ವೃತ್ತಿ ಜೀವನವನ್ನು ನಿರ್ವಹಿಸುತ್ತಾರೆ. ಸಂಪತ್ತಿನ ವಿಷಯದಲ್ಲಿ ಈ ನಕ್ಷತ್ರದವರು ಅದೃಷ್ಟಶಾಲಿಗಳು ಎನ್ನಲಾಗುತ್ತದೆ. ಕೆಲವು ಮೂಲಗಳಿಂದ ಆಸ್ತಿಯನ್ನು ಪಡೆದುಕೊಳ್ಳುವರು. ಹೂಡಿಕೆ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

​* ಕುಟುಂಬದಿಂದ ದೂರ ಇರುವರು:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇವರು ಆದಷ್ಟು ಕುಟುಂಬದವರೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಆದರೆ ತಂದೆಯೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಹೊಂದುವುದರ ಮೂಲಕ ಮಾನಸಿಕವಾಗಿ ಬೇಸರಕ್ಕೆ ಒಳಗಾಗುವರು. ಸಂಯಮದ ಕೊರತೆ ಹಾಗೂ ಸಣ್ಣ ವಿಷಯಗಳಿಗೂ ಹೆಚ್ಚು ಉತ್ಸುಕತೆ ತೋರುವ ಸಂಗತಿಯು ಕೆಲವು ಭಿನ್ನಾಭಿಪ್ರಾಯವನ್ನು ಸೃಷ್ಟಿಸಬಹುದು. ಶಿಕ್ಷಣ ಹಾಗೂ ಉದ್ಯೋಗದ ಕಾರಣದಿಂದ ಮನೆಯಿಂದ ದೂರ ಇರುವರು. ಎಲ್ಲಾ ಕಷ್ಟದ ಸಮಯದಲ್ಲೂ ತಮ್ಮ ಆತ್ಮೀಯರ ಜೊತೆಗೆ ನಿಲ್ಲುತ್ತಾರೆ. ಇವರು ತಾಳ್ಮೆಯಿಂದ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುವರು. ಎಲ್ಲರೊಳಗೊಂದಾಗು ಮಂಕುತಿಮ್ಮ

Leave a Comment